Ticker

6/recent/ticker-posts
Responsive Advertisement

News: ಚಿಪ್ಪಿಕಲ್ಲು ದುರಂತದ ನೋವು: ತಾಯಿಯನ್ನು ಕಳೆದುಕೊಂಡ ಯುವಕ ದುರ್ಮರಣ

ಭಟ್ಕಳ: ಇತ್ತೀಚೆಗೆ ಭಟ್ಕಳದಲ್ಲಿ ನಡೆದ ಚಿಪ್ಪಿಕಲ್ಲು ದುರಂತದ ನೋವು ಇನ್ನೂ ಮಾಸುವ ಮುನ್ನವೇ ಮತ್ತೊಂದು ಮನಕಲಕುವ ಘಟನೆ ಬೆಳಕಿಗೆ ಬಂದಿದೆ. ಆ ದುರಂತದಲ್ಲಿ ತಾಯಿಯನ್ನು ಕಳೆದುಕೊಂಡ ಆಘಾತದಿಂದ ಮಾನಸಿಕವಾಗಿ ತೀವ್ರ ನೊಂದಿದ್ದ ಯುವಕ ಮೃತಪಟ್ಟಿರುವ ಘಟನೆ ಸ್ಥಳೀಯರಲ್ಲಿ ದುಃಖ ಮೂಡಿಸಿದೆ.

ಮೃತರನ್ನು ಭಟ್ಕಳ ತಾಲೂಕಿನ ಬೇಂಗ್ರೆ-2 ಗ್ರಾಮದ ಮೋಳಿಮನೆ ನಿವಾಸಿ ಆನಂದ ಅಣ್ಣಪ್ಪ ನಾಯ್ಕ (36) ಎಂದು ಗುರುತಿಸಲಾಗಿದೆ. ಅವರು ಎಂ.ಕಾಂ. ಪದವೀಧರರಾಗಿದ್ದು, ಶಾಶ್ವತ ಉದ್ಯೋಗ ಸಿಗದ ಕಾರಣ ಕೆಲಕಾಲ ಪೇಂಟಿಂಗ್ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಕುಟುಂಬದವರ ಮಾಹಿತಿ ಪ್ರಕಾರ, ಇತ್ತೀಚೆಗೆ ವೆಂಕಟಾಪುರ ನದಿಯ ತಟ್ಟಿಹಕ್ಕಲ ಹೊಳೆಯಲ್ಲಿ ಸಂಭವಿಸಿದ ಚಿಪ್ಪಿಕಲ್ಲು ದುರಂತದಲ್ಲಿ ಮೃತಪಟ್ಟ 14 ಮಂದಿಯಲ್ಲಿ ಆನಂದ ಅವರ ತಾಯಿ ಲಕ್ಷ್ಮೀ ನಾಯ್ಕ ಅವರೂ ಸೇರಿದ್ದರು. ತಾಯಿಯ ಅಗಲಿಕೆಯ ನಂತರ ಆನಂದ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದು, ಅವರ ವರ್ತನೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ.

ಜುಲೈ 7ರಂದು ಮಧ್ಯಾಹ್ನ ಅವರು ಮನೆಯಿಂದ ಹೊರಟ ಬಳಿಕ ಮನೆಯ ಹಿಂಭಾಗದ ಬಾವಿಯಲ್ಲಿ ಪತ್ತೆಯಾಗಿದ್ದಾರೆ. ಸ್ಥಳೀಯರ ಸಹಾಯದಿಂದ ಅವರನ್ನು ಮೇಲಕ್ಕೆತ್ತಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಈ ಸಂಬಂಧ ಮೃತರ ತಂದೆ ಅಣ್ಣಪ್ಪ ಭೈರಾ ನಾಯ್ಕ (63) ಅವರು ಮುರುಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣದಲ್ಲಿ ಯಾವುದೇ ಅನುಮಾನ ಇಲ್ಲ ಎಂದು ತಿಳಿಸಿದ್ದಾರೆ.

ಪ್ರಕರಣದ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಅಲ್ಪಾವಧಿಯಲ್ಲೇ ಒಂದೇ ಕುಟುಂಬದ ಮೇಲೆ ಸಂಭವಿಸಿದ ಎರಡು ದುರ್ಘಟನೆಗಳು ಗ್ರಾಮಸ್ಥರ ಮನಸ್ಸನ್ನು ಮರುಗಿಸಿದ್ದು, ಇಡೀ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು