Ticker

6/recent/ticker-posts
Responsive Advertisement

Udupi: ಮಣಿಪಾಲದಲ್ಲಿ ಬೆಚ್ಚಿಬೀಳಿಸಿದ ಘಟನೆ: ಯುವತಿಯ ಮೇಲೆ ಹಲ್ಲೆ ಪ್ರಕರಣದಲ್ಲಿ ಸ್ನೇಹಿತೆ ಬಂಧನ

ಉಡುಪಿ ಜಿಲ್ಲೆಯ ಮಣಿಪಾಲದ ಶಾಂತಿನಗರದ ಬಳಿಯ ಬಾಡಿಗೆ ರೂಮಿನಲ್ಲಿ ಯುವತಿಯೊಬ್ಬಳ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ಕಳವು ಮಾಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿತೆಯನ್ನು ಬಂಧಿಸಿದ್ದಾರೆ.

ಬಂಧಿತೆಯನ್ನು ಅಂಕೋಲಾ ತಾಲೂಕಿನ ಖೇಣಿ ಬಾವಿಕೇರಿ ಗ್ರಾಮದ ಸುಷ್ಮಾ ಅಣ್ಣಪ್ಪ ನಾಯ್ಕ್‌ (31) ಎಂದು ಗುರುತಿಸಲಾಗಿದೆ. ಹಲ್ಲೆಗೆ ಒಳಗಾದ ಯುವತಿ ಯೋಗೀತಾ (23) ಎಂದು ತಿಳಿದುಬಂದಿದೆ. ಯೋಗೀತಾ ತನ್ನ ಇಬ್ಬರು ಗೆಳತಿಯರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಮೇ 12ರಂದು ಸಂಜೆ ಆಕೆಯ ರೂಮ್‌ಮೇಟ್‌ಗಳು ರಾತ್ರಿ ಪಾಳಿ ಕೆಲಸಕ್ಕೆ ತೆರಳಿದ್ದರು. ಕೆಲಸ ಮುಗಿಸಿ ಬೆಳಿಗ್ಗೆ ರೂಮಿಗೆ ಮರಳಿದಾಗ ಯೋಗೀತಾ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದಾಳೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರಂಭದಲ್ಲಿ ಅಪರಿಚಿತರು ಚಿನ್ನದ ಸರ ಕಳವು ಮಾಡಿ, ಬಳಿಕ ಯುವತಿಯ ಮೇಲೆ ಹಲ್ಲೆ ನಡೆಸಿರಬಹುದು ಎಂಬ ಶಂಕೆಯ ಮೇಲೆ ತನಿಖೆ ಆರಂಭಿಸಲಾಗಿತ್ತು.

ಮಣಿಪಾಲ ಪೊಲೀಸ್ ಠಾಣೆಯ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆ ನಡೆಸಲಾಯಿತು. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಸಂಶಯಾಸ್ಪದ ವ್ಯಕ್ತಿಗಳ ವಿಚಾರಣೆಯನ್ನೂ ನಡೆಸಿದರು.
 ತನಿಖೆಯ ವೇಳೆ ಯೋಗೀತಾಳ ಪಕ್ಕದ ರೂಮಿನಲ್ಲಿ ವಾಸವಾಗಿದ್ದ ಸುಷ್ಮಾಳ ಮೇಲೆ ಪೊಲೀಸರಿಗೆ ಅನುಮಾನ ವ್ಯಕ್ತವಾಯಿತು. ನಂತರ ಆಕೆಯನ್ನು ವಚಾರಣೆಗೆ ಒಳಪಡಿಸಿದಾಗ, ಆಕೆ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಣಕಾಸಿನ ತೊಂದರೆ ಕಾರಣವೆಂದು ಶಂಕೆ
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸುಷ್ಮಾ ಹಣಕಾಸಿನ ತೊಂದರೆಯಲ್ಲಿ ಇದ್ದಳು ಎನ್ನಲಾಗಿದೆ. ಮನೆಯವರಿಂದ ಹಣ ಕಳುಹಿಸುವಂತೆ ಒತ್ತಡ ಇತ್ತು. ಈ ಕಾರಣದಿಂದ ಹಣ ಹೊಂದಿಸಲು ಯೋಗೀತಾಳ ಚಿನ್ನಾಭರಣ ಕಳವು ಮಾಡಲು ಯೋಜಿಸಿದ್ದಾಳೆ ಎಂದು ತಿಳಿದುಬಂದಿದೆ.

ಮೇ 12ರ ರಾತ್ರಿ ಸುಷ್ಮಾ ಯೋಗೀತಾಳ ರೂಮಿಗೆ ತೆರಳಿ ಆಕೆಯೊಂದಿಗೆ ಉಳಿದಿದ್ದಾಳೆ. ಬೆಳಗಿನ ಜಾವ ಯೋಗೀತಾ ನಿದ್ರೆಯಲ್ಲಿದ್ದ ವೇಳೆ ಆಕೆಯ ಮೇಲೆ ಹಲ್ಲೆ ನಡೆಸಿ, ನಂತರ ಕತ್ತಿನಲ್ಲಿದ್ದ ಚಿನ್ನದ ಸರ ಮತ್ತು ಕಿವಿಯ ಬೆಂಡೋಲೆಗಳನ್ನು ತೆಗೆದುಕೊಂಡು ತನ್ನ ರೂಮಿಗೆ ಹಿಂತಿರುಗಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಘಟನೆಯ ನಂತರ ಯೋಗೀತಾಳ ರೂಮ್‌ಮೇಟ್‌ಗಳು ಕೆಲಸ ಮುಗಿಸಿ ಮರಳಿದಾಗ ವಿಷಯ ಬೆಳಕಿಗೆ ಬಂದಿದೆ. ಆ ವೇಳೆ ಸುಷ್ಮಾ ಕೂಡ ಹೊರಬಂದು, ಯೋಗೀತಾಳನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿದ್ದಾಳೆ ಎಂದು ಹೇಳಲಾಗಿದೆ.

ಪೊಲೀಸರು ಆರೋಪಿತೆ ಸುಷ್ಮಾಳನ್ನು ಬಂಧಿಸಿ, ಕಳವು ಮಾಡಲಾಗಿದೆ ಎನ್ನಲಾದ ಚಿನ್ನದ ಸರ ಮತ್ತು ಬೆಂಡೋಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಮುಂದಿನ ತನಿಖೆ ಮಣಿಪಾಲ ಪೊಲೀಸರು ನಡೆಸುತ್ತಿದ್ದಾರೆ.

ಎಚ್ಚರಿಕೆಯ ಸಂದೇಶ

ಈ ಘಟನೆ ಬಾಡಿಗೆ ಮನೆಗಳಲ್ಲಿ ವಾಸಿಸುವ ಯುವತಿಯರು ಮತ್ತು ಕೆಲಸಕ್ಕೆ ತೆರಳುವ ಮಹಿಳೆಯರಿಗೆ ಎಚ್ಚರಿಕೆಯ ಸಂಗತಿಯಾಗಿದೆ. ಪರಿಚಯದವರು ಎಂಬ ಕಾರಣಕ್ಕೆ ಸಂಪೂರ್ಣ ನಂಬಿಕೆ ಇಡುವುದಕ್ಕಿಂತ, ವೈಯಕ್ತಿಕ ಸುರಕ್ಷತೆ ಮತ್ತು ಬೆಲೆಬಾಳುವ ವಸ್ತುಗಳ ಸಂರಕ್ಷಣೆಗೆ ಹೆಚ್ಚಿನ ಗಮನ ನೀಡುವುದು ಅಗತ್ಯ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು