Ticker

6/recent/ticker-posts
Responsive Advertisement

Bidar: ಮೃತರ ಖಾತೆಗೆ ಗೃಹಲಕ್ಷ್ಮಿ ಹಣ ಜಮಾ: ಬೀದರ್‌ನಲ್ಲಿ ಕೋಟ್ಯಂತರ ರೂ. ಗೊಂದಲ

ಬೀದರ್: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಕುರಿತು ಬೀದರ್ ಜಿಲ್ಲೆಯಲ್ಲಿ ಗಂಭೀರ ಗೊಂದಲದ ವಿಷಯ ಬೆಳಕಿಗೆ ಬಂದಿದೆ. ಬಡ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ಈ ಯೋಜನೆಯಲ್ಲಿ, ಕೆಲ ಮೃತ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಿರುವುದು ಗಮನಕ್ಕೆ ಬಂದಿದೆ.

ಹಣ ಬಿಡುಗಡೆ ವಿಳಂಬ ಮತ್ತು ತಾಂತ್ರಿಕ ಸಮಸ್ಯೆಗಳ ಬಗ್ಗೆ ಈ ಯೋಜನೆ ಹಿಂದೆಂದೇ ಚರ್ಚೆಗೆ ಕಾರಣವಾಗಿತ್ತು. ಇದೀಗ ಬೀದರ್ ಜಿಲ್ಲೆಯಲ್ಲಿ ಅಧಿಕಾರಿಗಳ ದಾಖಲೆ ನವೀಕರಣದ ಕೊರತೆಯಿಂದ ಮೃತರಾದ 5,327 ಫಲಾನುಭವಿಗಳ ಖಾತೆಗಳಿಗೆ ಸುಮಾರು ₹12 ಕೋಟಿ ಹಣ ಜಮೆಯಾಗಿದೆ ಎಂಬ ಮಾಹಿತಿ ಹೊರಬಂದಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾಹಿತಿಯ ಪ್ರಕಾರ, ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿತ ಕೆಲ ಫಲಾನುಭವಿಗಳು ಮೃತಪಟ್ಟಿದ್ದರೂ ಅವರ ವಿವರಗಳು ವ್ಯವಸ್ಥೆಯಲ್ಲಿ ಸಮಯಕ್ಕೆ ಸರಿಯಾಗಿ ನವೀಕರಿಸಲಾಗಿಲ್ಲ. ಇದರಿಂದಾಗಿ ಒಟ್ಟು 59,954 ಕಂತುಗಳು ಮೃತ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಿದ್ದು, ಪ್ರತಿ ತಿಂಗಳು ₹2,000ರಂತೆ ಸುಮಾರು ₹12 ಕೋಟಿ ಹಣ ಜಮೆಯಾಗಿದೆ ಎಂದು ತಿಳಿದುಬಂದಿದೆ. ಇದೇ ಕ್ರಮ ಮುಂದುವರೆದಿದ್ದರೆ ಈ ಮೊತ್ತವು ಸುಮಾರು ₹31.96 ಕೋಟಿವರೆಗೆ ತಲುಪುವ ಸಾಧ್ಯತೆ ಇತ್ತು ಎಂದು ಅಂದಾಜಿಸಲಾಗಿದೆ.

ಈ ವಿಷಯ ಬೆಳಕಿಗೆ ಬಂದ ನಂತರ ಸಂಬಂಧಿತ ಇಲಾಖೆಗಳು ಎಚ್ಚೆತ್ತುಕೊಂಡಿದ್ದು, ಮೃತ ಫಲಾನುಭವಿಗಳ ಖಾತೆಗಳಿಗೆ ಜಮೆಯಾದ ಹಣವನ್ನು ವಾಪಸ್ ಪಡೆಯುವ ಹಾಗೂ ದಾಖಲೆಗಳನ್ನು ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ ಎಂದು ತಿಳಿದುಬಂದಿದೆ. ಯೋಜನೆಯ ಲಾಭ ನಿಜವಾದ ಅರ್ಹ ಮಹಿಳೆಯರಿಗೆ ತಲುಪುವಂತೆ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕಗೊಳಿಸುವ ಅಗತ್ಯವಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು