ಕುಮಟಾ: ಬೆಂಗಳೂರು – ವಾಸ್ಕೊ ನೂತನ ರೈಲು ಸಂಚಾರಕ್ಕೆ ಕೇಂದ್ರದಿಂದ ಅನುಮತಿ ದೊರೆತಿದ್ದು, ಶೀಘ್ರವೇ ವಾಸ್ಕೋದಿಂದ ಪಡೀಲ್ ಮಾರ್ಗವಾಗಿ ಬೆಂಗಳೂರಿಗೆ ನೂತನ ರೈಲು ಸಂಚಾರ ಪ್ರಾರಂಭಗೊಳ್ಳಲಿದೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,” ಈವರೆಗೆ ಕಾರವಾರದಿಂದ ಮದ್ಯಾಹ್ನ 3:30ಕ್ಕೆ ಕುಮಟಾಕ್ಕೆ ಬಂದು ಬೆಂಗಳೂರಿಗೆ ತೆರಳುತ್ತಿದ್ದ ರೈಲು, ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್ ಗೆ ತೆರಳಿ ಬೆಳಿಗ್ಗೆ 9 ರ ವೇಳೆಗೆ ಬೆಂಗಳೂರಿನ ಯಶವಂತಪುರ ನಿಲ್ದಾಣವನ್ನು ತಲುಪುತ್ತಿತ್ತು.
ಅಂದರೆ ಸುಮಾರು 16 ರಿಂದ 17 ಗಂಟೆಗಳ ಕಾಲ ಪ್ರಯಾಣ ಮಾಡಬೇಕಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಸುರೇಶ ಅಂಗಡಿ, ಸಂಸದ ಅನಂತಕುಮಾರ ಹೆಗಡೆ, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ರಾಜೀವ ಗಾಂವಕರ ಅವರ ಸತತ ಪ್ರಯತ್ನದಿಂದ ಹೊಸ ರೈಲು ಸಂಚಾರಕ್ಕೆ ಅನುಮತಿ ಪಡೆದು, ರೈಲು ಮಂಗಳೂರಿಗೆ ತೆರಳದೇ ನೇರವಾಗಿ ಪಡೀಲ್ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದೆ.
ವಾಸ್ಕೊದಿಂದ ಪ್ರಾರಂಭಗೊಂಡು ರಾತ್ರಿ 8:30 ರ ವೇಳೆಗೆ ಕುಮಟಾದಿಂದ ನಿರ್ಗಮಿಸಲಿರುವ ರೈಲು ಬೆಳಿಗ್ಗೆ ಸುಮಾರು 8:30 ರ ವೇಳೆಗೆ ಬೆಂಗಳೂರಿನ ಯಶವಂತಪುರ ನಿಲ್ದಾಣವನ್ನು ತಲುಪಲಿದೆ. ಇದರಿಂದಾಗಿ ಪ್ರಯಾಣಿಕರ ಸಂಚಾರದ ಸಮಯ ಉಳಿತಾಯವಾಗಲಿದೆ “ಎಂದರು.
ಕೆ.ಆರ್.ಯು.ಸಿ.ಸಿ ಸದಸ್ಯ ರಾಜೀವ ಗಾಂವಕರ್ ಮಾತನಾಡಿ,” ಇದೀಗ ಮದ್ಯಾಹ್ನ 3:30 ಕ್ಕೆ ಕುಮಟಾದಿಂದ ಇರುವ ಕಾರವಾರ – ಬೆಂಗಳೂರು ರೈಲಿನ ಸಮಯದಲ್ಲಿ ಈವರೆಗೆ ಯಾವುದೇ ಬದಲಾವಣೆಗಳು ಆಗಿಲ್ಲವಾಗಿದ್ದು, ಅವು ಎಂದಿನಂತೆ ಸಂಚರಿಸಲಿದೆ. ಪಡೀಲ್ ಬೈಪಾಸ್ ಮಾರ್ಗವಾಗಿ ಸಂಚರಿಸಲು ಅನುಮತಿ ದೊರೆತಿರುವ ಈ ರೈಲ್ವೆ ಮಾರ್ಗಕ್ಕೆ 14 ಕೋಚ್ ಗಳನ್ನು ಒಳಗೊಂಡ ನೂತನ ರೈಲನ್ನು ಒದಗಿಸಲಾಗಿದೆ. 2 ಟೈರ್ ಎಸಿ 1, 3 ಟೈರ್ ಎಸಿ 3, ಸ್ಲೀಪರ್ 7 ಹಾಗೂ ಜನರಲ್ ಕ್ಯಾಟಗರಿಯ ಒಟ್ಟೂ 3 ಬೋಗಿಗಳು ಇರಲಿದೆ.
ವಿಶೇಷ ಸಂಧರ್ಭಗಳಲ್ಲಿ ಖಾಸಗಿ ಬಸ್ಸುಗಳು ದರವನ್ನು ಮನಬಂದಂತೆ ಏರಿಸುವುದರಿಂದಾಗಿ ಜನರ ಪರದಾಡಬೇಕಾಗುತ್ತದೆ. ಆದರೆ ಈ ಟ್ರೇನ್ ಮೂಲಕ ಕಾರವಾರದಿಂದ ಬೆಂಗಳೂರಿಗೆ ಕೇವಲ 200 ರೂ ವೆಚ್ಚದಲ್ಲಿ ಪ್ರಯಾಣಿಸಬಹುದಾಗಿದೆ. ಬೆಂಗಳೂರಿನಿಂದ ಹಿಂತಿರುಗಲು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಸಂಜೆ 6:30 ಗಂಟೆಯನ್ನು ನಿರ್ಧರಿಸಲಾಗಿದ್ದು, ಬೆಳಗ್ಗೆ 7 ಕ್ಕೆ ರೈಲು ಕುಮಟಾಕ್ಕೆ ಬಂದು ಸೇರಲಿದೆ. ಅಲ್ಲದೇ ಕಾರವಾರದಲ್ಲಿ ರೈಲು ಸಂಚಾರ ಕೊನೆಗೊಂಡ ನಂತರ ರೈಲಿಗೆ ಇಂಧನ, ನೀರು ಹಾಗೂ ಇತರರ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗದೇ ಇರುವ ಕಾರಣದಿಂದಾಗಿ ರೈಲನ್ನು ವಾಸ್ಕೋದಲ್ಲಿ ಕೊನೆಗೊಳಿಸಲು ನಿರ್ಧರಿಸಲಾಗಿದೆ. ಇನ್ನು ಕುಮಟಾ ರೈಲ್ವೇ ನಿಲ್ದಾಣದ 2 ನೇ ಪ್ಲಾಟ್ ಫಾರ್ಮನ ಕುರಿತು ಕೆಲದಿನಗಳ ಹಿಂದೆ ನಡೆದ ಸಭೆಯಲ್ಲಿ ಪ್ರಸ್ತಾವನೆಯನ್ನೂ ಇಡಲಾಗಿದ್ದು, ಶೀಘ್ರವೇ ಆ ಕೆಲಸವೂ ಪ್ರಾರಂಭಗೊಳ್ಳಲಿದೆ “ಎಂದರು.
ಈ ಸಂಧರ್ಭದಲ್ಲಿ ಮಂಡಲಾಧ್ಯಕ್ಷ ಹೇಮಂತ ಗಾಂವಕರ್, ಜಿ.ಐ.ಹೆಗಡೆ, ಜಿ.ಎಸ್.ಗುನಗಾ, ಪುರಸಭಾ ಸದಸ್ಯರಾದ ಪಲ್ಲವಿ ಮಡಿವಾಳ, ಕಿರಣ ಕುಮಟಾಕರ್, ಅನಿಲ್ ಹರ್ಮಲಕರ್, ಕುಮಾರ ಮಾರ್ಕಾಂಡೆ, ಜಯಾ ಶೇಟ್, ಕುಮಾರ ಕವರಿ ತೊರ್ಕೆ, ಉದಯ ಭಟ್, ವಿನಾಯಕ ಭಟ್, ದಾಮೋದರ ನಾಯ್ಕ, ವಿನಾಯಕ ನಾಯ್ಕ ಸೇರಿದಂತೆ ಇತರರು ಇದ್ದರು.