Ticker

6/recent/ticker-posts
Responsive Advertisement

News: ತರೀಕೆರೆ ವಸತಿ ಶಾಲೆಯಲ್ಲಿ ಶಾಕ್: 10 ಅಡಿ ಆಳದಲ್ಲಿ 70 ಗೋಧಿ ಮೂಟೆ ಪತ್ತೆ

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಆವರಣದಲ್ಲಿ ಗೋಧಿ ಮೂಟೆಗಳನ್ನು ಹೂತಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಸಾರ್ವಜನಿಕರ ದೂರಿನ ಹಿನ್ನೆಲೆ ಇಂದು ಜೆಸಿಬಿ ಮೂಲಕ ಅಗೆದು ನೋಡಿದಾಗ ಸುಮಾರು 10 ಅಡಿ ಆಳದಲ್ಲಿ 70ಕ್ಕೂ ಹೆಚ್ಚು ಗೋಧಿ ಮೂಟೆಗಳು ಪತ್ತೆಯಾಗಿವೆ.

ಈ ಪ್ರಕರಣದಲ್ಲಿ ಶಾಲೆಯ ಪ್ರಾಂಶುಪಾಲ ಹರೀಶ್ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಲಭ್ಯ ಮಾಹಿತಿಯ ಪ್ರಕಾರ, ಈ ಗೋಧಿ ಮೂಟೆಗಳು ಸುಮಾರು ಒಂದು ವರ್ಷದ ಹಿಂದೆ ಹೂಳಲ್ಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಗೋಧಿ ಹೂಳಲು ನಿಖರ ಕಾರಣ ಏನು ಎಂಬುದಕ್ಕೆ ಇನ್ನೂ ಸ್ಪಷ್ಟ ಉತ್ತರ ದೊರಕಿಲ್ಲ.

ಸ್ಥಳೀಯವಾಗಿ ಕೆಲವರು, ಸಂಗ್ರಹಿಸಿದ್ದ ಗೋಧಿ ಮಾರಾಟವಾಗದೆ ಉಳಿದ ಹಿನ್ನೆಲೆ ಹೂಳಲ್ಪಟ್ಟಿರಬಹುದು ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ, ಶಾಲೆಯ ಸಿಬ್ಬಂದಿ “ಗೋಧಿ ಹಾಳಾಗಿತ್ತು” ಎಂಬ ಕಾರಣವನ್ನು ಮುಂದಿಟ್ಟಿದ್ದಾರೆ. ಆದರೆ, ಗೋಧಿ ಹಾಳಾಗಿದ್ದರೆ ಅದನ್ನು ಸರ್ಕಾರಕ್ಕೆ ಹಿಂದಿರುಗಿಸುವುದು ಅಥವಾ ಆಹಾರ ಇಲಾಖೆಯ ಗಮನಕ್ಕೆ ತರುವುದು ನಿಯಮವಾಗಿದೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.

ಈ ಘಟನೆ ಮತ್ತಷ್ಟು ಗಂಭೀರವಾಗಿಸುವ ಸಂಗತಿ ಎಂದರೆ, ವಸತಿ ಶಾಲೆಯ ಮಕ್ಕಳಿಗೆ ಸಮರ್ಪಕವಾಗಿ ಆಹಾರ ವಿತರಣೆ ಮಾಡಲಾಗಿದೆಯೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಸಾರ್ವಜನಿಕರು ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಂಬಂಧಿತ ಅಧಿಕಾರಿಗಳು ಈಗಾಗಲೇ ಪರಿಶೀಲನೆ ಪ್ರಾರಂಭಿಸಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ವಿವರಗಳು ಹೊರಬರುವ ನಿರೀಕ್ಷೆಯಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು