ಕುಟುಂಬದವರ ಜತೆಗೆ ಸಮಯ ಕಳೆಯಲು ಅವಕಾಶ ಸಿಗುತ್ತದೆ. ಒತ್ತಡಗಳು ಸ್ವಲ್ಪ ಮಟ್ಟಿಗೆ ಕಡಿಮೆ ಆಗುತ್ತದೆ. ಬಹಳ ಸಮಯದಿಂದ ಬಾಕಿ ಉಳಿಸಿಕೊಂಡಿದ್ದ ಮನೆಯಲ್ಲಿನ ಕೆಲಸಗಳನ್ನು ಮಾಡಿಕೊಳ್ಳುತ್ತೀರಿ. ಮುಖ್ಯ ದಾಖಲೆ- ಪತ್ರಗಳನ್ನು ಜೋಡಿಸಿಕೊಳ್ಳಲು ಸಂಗಾತಿಯ ನೆರವನ್ನು ಪಡೆಯುತ್ತೀರಿ.
ಕಳೆದು ಹೋದ ದಿನಗಳ ಬಗ್ಗೆ ಯೋಚಿಸುತ್ತಾ ಕೂರಲು ಸಮಯವಲ್ಲ. ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಆಲೋಚಿಸಿ. ಧಾರ್ಮಿಕ ಚಿಂತನೆಯಿಂದ ಮಾನಸಿಕವಾಗಿ ನೆಮ್ಮದಿ ದೊರೆಯುತ್ತದೆ. ಮಕ್ಕಳಿಗಾಗಿ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸುವ ಆಲೋಚನೆ ಮಾಡುತ್ತೀರಿ.
ಮುಂದಾಳತ್ವ ವಹಿಸುವಂಥ ಅವಕಾಶ ನೀಡಿದರೆ ಜವಾಬ್ದಾರಿ ತೆಗೆದುಕೊಳ್ಳುವ ಮುಂಚೆ ಸಾಧಕ- ಬಾಧಕಗಳನ್ನು ಆಲೋಚಿಸಿ. ಬಹಳ ಸಮಯದಿಂದ ಇಷ್ಟ ಪಟ್ಟ ಹುದ್ದೆ ಎಂದುಕೊಂಡು ಒಂದೇ ಸಲಕ್ಕೆ ಹೂಂ ಅಂದುಬಿಟ್ಟರೆ ಭವಿಷ್ಯದಲ್ಲಿ ಚಿಂತೆ ಮಾಡುವಂತೆ ಆಗುತ್ತದೆ. ಎಚ್ಚರಿಕೆಯಿಂದಿರಿ.
ಸ್ವಯಾರ್ಜಿತವಾದ ಆಸ್ತಿ ಹಂಚಿಕೆ ಬಗ್ಗೆ ಅಥವಾ ಅದನ್ನು ಸದ್ವಿನಿಯೋಗ ಮಾಡುವ ಆಲೋಚನೆ ಮೂಡಬಹುದು. ಆಪ್ತರು ಹಾಗೂ ಸಂಬಂಧಿಕರ ಜತೆಗೆ ಈ ಬಗ್ಗೆ ಮಾತುಕತೆ ನಡೆಸಲಿದ್ದೀರಿ. ಕಾನೂನು ವಿಚಾರಗಳ ಕಡೆಗೆ ಹೆಚ್ಚಿನ ಗಮನ ನೀಡಿ. ಹೊಸಬರ ಜತೆಗೆ ವ್ಯವಹಾರ ಮಾಡುವಾಗ ಜಾಗ್ರತೆ ಅಗತ್ಯ.
ತಂದೆ- ತಾಯಿಯ ಸಲುವಾಗಿ ಹೆಚ್ಚು ಸಮಯ ಮೀಸಲಿಡುವ ಸಾಧ್ಯತೆ ಇದೆ. ಮನೆಯಲ್ಲಿ ದುರಸ್ತಿ ಆಗಬೇಕಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಸರಿ ಮಾಡಲು ಅಥವಾ ಮಾಡಿಸಲು ಹಣ ಖರ್ಚು ಮಾಡಲಿದ್ದೀರಿ. ಧ್ಯಾನ, ಯೋಗ, ಸೂರ್ಯ ನಮಸ್ಕಾರಗಳ ಕಡೆಗೆ ನಿಮ್ಮ ಮನಸ್ಸು ಹರಿಯಲಿದೆ.
ದೈವಾನುಗ್ರಹದಿಂದ ಹಲವು ಕಾರ್ಯಗಳನ್ನು ಒಟ್ಟಿಗೆ ಮಾಡಲು ಸಾಧ್ಯವಾಗುತ್ತದೆ. ಬಲಿಷ್ಠ ಶತ್ರುವನ್ನು ಮಣಿಸಲು ಸಫಲರಾಗುತ್ತೀರಿ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಆದರೆ ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರು ಆರೋಗ್ಯದ ಕಡೆಗೆ ಹೆಚ್ಚಿನ ನಿಗಾ ವಹಿಸಬೇಕು.
ಕಷ್ಟದಲ್ಲಿ ಇರುವವರ ಬಗ್ಗೆ ಕನಿಕರ ಇರಲಿ. ನಿಮ್ಮಿಂದ ಸಹಾಯ ಮಾಡಲು ಸಾಧ್ಯವಾದರೆ ಅಂಥವರಿಗೆ ನೆರವಾಗಿ. ವ್ಯಾಪಾರ- ವ್ಯವಹಾರ ಮಾಡುವವರಿಗೆ ಖರ್ಚಿನ ಪ್ರಮಾಣದಲ್ಲಿ ಏಕಾಏಕಿ ಹೆಚ್ಚಾಗಲಿದೆ. ಕೆಲವರಿಗೆ ವ್ಯಾಪಾರವನ್ನೇ ನಿಲ್ಲಿಸಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿ ಇಲ್ಲ. ಆದರೆ ಅದಕ್ಕೆ ಗಾಬರಿ ಪಡುವ ಅಗತ್ಯ ಇಲ್ಲ.
ಕೆಲ ದಿನಗಳಿಂದ ಕಾಡುತ್ತಿದ್ದ ನಿರಾಸೆ ಹಾಗೂ ಆತಂಕ ಕೊನೆಯಾಗಲಿದೆ. ಹಣಕಾಸಿನ ಸ್ಥಿತಿಯಲ್ಲೂ ಚೇತರಿಕೆ ಕಾಣಿಸಲಿದೆ. ಪರಸ್ಥಳದಲ್ಲಿ ವಾಸ ಇರುವವರಿಗೆ ಕಷ್ಟಗಳಿಗೆ ಪರಿಹಾರ ದೊರಕಲಿದ್ದು, ಉದ್ಯೋಗಸ್ಥರಿಗೆ ಹೆಚ್ಚಿನ ಜವಾಬ್ದಾರಿ ಹೆಗಲೇರಲಿದೆ. ಅಂತರಂಗದ ಸಂಗತಿಗಳನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ.
ಎಲ್ಲರನ್ನೂ ಒಪ್ಪಿಸಿ, ಒಳ್ಳೆಯವರಾಗಬೇಕು ಅಂದುಕೊಂಡು ಪ್ರಯತ್ನ ಮಾಡುವುದೇ ಕಷ್ಟದ ಕೆಲಸ. ಹಾಗೆ ಒಂದು ವೇಳೆ ಪ್ರಯತ್ನಿಸಿದರೆ ಅದರಿಂದ ನೆಮ್ಮದಿ ಹಾಳಾಗುತ್ತದೆ. ಆದ್ದರಿಂದ ನೇರವಂತಿಕೆಯಿಂದ ಬದುಕಲು ಪ್ರಯತ್ನಿಸಿ. ನಿಮ್ಮ ಮನಸಿನಲ್ಲಿರುವ ವಿಚಾರವನ್ನು ಹಿಂಜರಿಕೆ ಇಲ್ಲದೆ ತಿಳಿಸಿ.
ಈ ದಿನ ಆಲಸ್ಯ ತುಂಬಾ ಜಾಸ್ತಿ ಆಗಲಿದೆ. ಆಪ್ತರು- ಸ್ನೇಹಿತರೊಂದಿಗೆ ಜಗಳ ಆಗುವ ಸಾಧ್ಯತೆ ಕೂಡ ಇದೆ. ಕಷ್ಟ ಇದೆ ಎಂಬ ಕಾರಣಕ್ಕೆ ಯಾರೆಂದರೆ ಅವರಲ್ಲಿ ಸಹಾಯ ಕೇಳಬೇಡಿ. ಹಾಗೊಂದು ವೇಳೆ ಮಾಡಿದರೆ ಅವಮಾನದ ಪಾಲಾಗುತ್ತೀರಿ. ಹಣಕಾಸಿನ ವಿಚಾರದಲ್ಲಿ ಹುಚ್ಚು ಸಾಹಸಗಳಿಗೆ ಇಳಿಯಬೇಡಿ.
ಊಟ- ತಿಂಡಿ, ನೀರು ಸೇವನೆಯ ಬಗ್ಗೆ ಬಹಳ ಜಾಗ್ರತೆಯಿಂದ ಇರಿ. ಸ್ವಚ್ಛತೆ ಕಾಪಾಡಿಕೊಳ್ಳುವ ಕಡೆ ಗಮನ ಹೆಚ್ಚಿಗೆ ಇರಲಿ. ಹೆಚ್ಚಿನ ಬಡ್ಡಿ ಆಸೆಗೆ ಹಣವನ್ನು ನೀಡಿ, ಕಳೆದುಕೊಳ್ಳುವಂಥ ಸನ್ನಿವೇಶ ಸೃಷ್ಟಿ ಆಗಬಹುದು. ಆದ್ದರಿಂದ ನಯವಾಗಿ ಮಾತನಾಡಿ, ವಂಚನೆ ಮಾಡುವವರ ಬಗ್ಗೆ ಎಚ್ಚರಿಕೆ ಇರಲಿ.
ರಾಜಕೀಯದಲ್ಲಿ ಇರುವವರಿಗೆ ಪ್ರಭಾವ ಮತ್ತಷ್ಟು ಹೆಚ್ಚಾಗಲಿದೆ. ಸಾಮಾಜಿಕ ವಲಯದಲ್ಲಿ ನಿಮ್ಮ ಮಾತಿಗೆ ಮನ್ನಣೆ ಸಿಗುತ್ತದೆ. ಭವಿಷ್ಯದಲ್ಲಿ ಅತ್ಯುತ್ತಮ ಅವಕಾಶ ದೊರಕಿಸಿ ಕೊಡುವ ಬಗ್ಗೆ ಒಳ್ಳೆ ಹುದ್ದೆಯಲ್ಲಿ ಇರುವವರು ಮಾತು ಕೊಡುವ ಸಾಧ್ಯತೆ ಇದೆ. ನಿಮಗೆ ಒಳ್ಳೆಯದನ್ನು ಮಾಡಿಕೊಳ್ಳುವುದು ನಿಮ್ಮ ನಾಲಗೆ ಹಾಗೂ ಸ್ವಭಾವದ ಮೇಲೆ ನಿಂತಿದೆ.
Tags:
ದಿನ ಭವಿಷ್ಯ














