ಮಂಗಳೂರು: ಕೊರೊನಾ ವೈರಸ್ ಸೋಂಕಿನ ಮುನ್ನೆಚ್ಚರಿಕೆ ಸಲುವಾಗಿ ವಾಹನಗಳ ತಪಾಸಣೆಯನ್ನು ಮಾಡುತ್ತಿದ್ದ ಕರ್ತವ್ಯ ನಿರತ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ತಪ್ಪಿಸಿಕೊಂಡ ಆರೋಪಿಯನ್ನು ಬಂಧಿಸಿ, ಆಸ್ಪತ್ರೆಗೆ ದಾಖಲು ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪರಪ್ಪೆಯ ಸಿನಾನ್ ಎಂಬುವವನು ಬಂಧಿತ ಆರೋಪಿಯಾಗಿದ್ದಾನೆ. ಎ.ಎಸ್.ಐ. ಭಾಸ್ಕರ್ ಪ್ರಸಾದ್ ಮತ್ತು ಹೆಡ್ ಕಾನ್ಸ್ ಟೇಬಲ್ ಆದ ರಾಮ ನಾಯ್ಕ ಅವರು ಎಲ್ಲ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಸಿನಾನ್ ಎಂಬಾತ ಮುರೂರು ಗಡಿಭಾಗಕ್ಕೆ ಬಂದು ಪೊಲೀಸರು ತಡೆದಾಗ ಅವರ ಮಾತನ್ನು ಕೇಳದೇ ಗಡಿಯನ್ನೂ ದಾಟಲು ಪ್ರಯತ್ನಿಸಿದ್ದಾನೆ.
ಗಡಿಯನ್ನು ದಾಟದಂತೆ ಪೊಲೀಸರು ಎಷ್ಟೇ ಮನವಿ ಮಾಡಿದರೂ ಕೂಡ ಏಕಾಏಕಿಯಾಗಿ ಪೊಲೀಸರ ಮೇಲೆ ಕಲ್ಲು ಬಿಸಾಡಲು ಪ್ರಾರಂಭಿಸಿದ್ದಾನೆ. ಇದರ ಪರಿಣಾಮವಾಗಿ ಕರ್ತವ್ಯದಲ್ಲಿದ್ದ ಎ.ಎಸ್.ಐ. ಭಾಸ್ಕರ್ ಪ್ರಸಾದ್ ಮತ್ತು ಪೋಲಿಸ್ ಸಿಬ್ಬಂದಿ ರಾಮ ನಾಯ್ಕ ಅವರಿಗೆ ಗಾಯಗಳಾಗಿದೆ. ಇಷ್ಟು ಮಾತ್ರವಲ್ಲದೆ ಆತ ಸ್ಧಳದಲ್ಲಿದ್ದ ಹೈವೇ ಪಟ್ರೋಲ್ ವಾಹನಕ್ಕೂ ಕೂಡ ಕಲ್ಲು ಹೊಡೆಯಲು ಆರಂಭಿಸಿದ್ದಾನೆ.
ಕೂಡಲೇ ವಿಷಯವನ್ನು ತಿಳಿದು ಸುಳ್ಯ ಎಸ್.ಐ. ಹರೀಶ್ ಕೂಡ ಮುರೂರಿಗೆ ಆಗಮಿಸಿದ್ದು, ಗಾಯಗೊಂಡ ಪೊಲೀಸರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಗಿದೆ. ಕಲ್ಲು ಹೊಡೆದ ಬಳಿಕ ಆರೋಪಿ ತಪ್ಪಿಸಿಕೊಂಡಿದ್ದು, ಆನಂತರ ಪೊಲೀಸರು ಹುಡುಕಾಟ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
Tags:
ಮಂಗಳೂರು ಜಿಲ್ಲಾ ಸುದ್ದಿಗಳು