ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಇಂದು ಸಂಜೆಯ ವೇಳೆಗೆ ಗುಡುಗು ಮತ್ತು ಸಿಡಿಲಿನ ಸಹಿತ ಭಾರೀ ಗಾಳಿ ಮತ್ತು ಮಳೆಯಾಗಿದೆ. ಇಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ವರುಣನ ಅಬ್ಬರದಿಂದಾಗಿ ಮೆಗ್ಗಾನ್ ಬೋಧನಾ ಆಸ್ಪತ್ರೆಯ ಮಕ್ಕಳ ವಾರ್ಡ್ ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಅವಘಡ ಸಂಭವಿಸಿ ಭಾರೀ ಅನಾಹುತ ತಪ್ಪಿದೆ. ಯಾರಿಗೂ ಯಾವುದೇ ರೀತಿಯ ಅನಾಹುತ ಆಗಲಿಲ್ಲ.
ದೈವಕೃಪೆಯಿಂದ ಇಂದು ನಡೆದ ಘಟನೆಯಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸಿಲ್ಲ. ಎಲ್ಲಾ 33 ಕಂದಮ್ಮಗಳು ಸುರಕ್ಷಿತವಾಗಿದ್ದಾರೆ. ಮಳೆ ಮತ್ತು ಗುಡುಗಿನ ಆರ್ಭಟ ಕಮ್ಮಿ ಆಗುತ್ತಿದ್ದಂತೆಯೇ ಇಲ್ಲಿನ ಆಸ್ಪತ್ರೆಯಲ್ಲಿನ ಮಕ್ಕಳು ಹಾಗೂ ಬಾಣಂತಿಯರನ್ನು ನಗರದ ಸರ್ಜಿ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಈ ಅವಗಡದ ಕುರಿತು ಮಾಹಿತಿ ಸಿಗುತ್ತಿದ್ದಂತೆಯೇ ಆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಬಾರಿ ಅನಾಹುತವಾಗುವ ಘಟನೆಯೊಂದು ತಪ್ಪಿದಂತಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿ ಎಲ್ಲವನ್ನೂ ಪರಿಶೀಲನೆ ಮಾಡಿದ್ದಾರೆ.
ಈ ಘಟನೆಯ ಕುರಿತು ಪ್ರತಿಕ್ರಿಯೆಯನ್ನು ನೀಡಿದ ಸಚಿವರು ಎಲ್ಲಾ 33 ಮಕ್ಕಳು ಹಾಗೂ ಬಾಣಂತಿಯರು ಈಗಾಗಲೇ ಸುರಕ್ಷಿತರಾಗಿದ್ದಾರೆ ಮತ್ತು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ. ಆದರೆ ಈ ಘಟನೆಯಲ್ಲಿ ಮೂವರು ಮಕ್ಕಳಿಗೆ ಸ್ವಲ್ಪ ಉಸಿರಾಟದ ತೊಂದರೆ ಉಂಟಾಗಿದ್ದು ಅದು ವೈದ್ಯರ ಗಮನಕ್ಕೆ ಬಂದಿದೆ ಮತ್ತು ಅವರು ಈಗಾಗಲೇ ಚಿಕಿತ್ಸೆ ನಡೆಸಿದ್ದಾರೆ.