ದಾವಣಗೆರೆ, ಏಪ್ರಿಲ್ 05: ಲಾಕ್ ಡೌನ್ ಇದೆ, ಮೇಣದ ಬತ್ತಿ ತರಲು ಹೋದರೆ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಾರೆ ಎಂದು ಹೇಳಿರುವ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರಿಗೆ ದಾವಣಗೆರೆಯ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಕ್ಯಾಂಡಲ್ ತುಂಬಿರುವ ಬಾಕ್ಸ್ ಒಂದನ್ನು ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿಕೊಟ್ಟಿದ್ದಾರೆ.
ಇದೇ ವೇಳೆಯಲ್ಲಿ ಮಾತನಾಡಿದ ದಕ್ಷಿಣ ಯುವಮೋರ್ಚಾ ಅಧ್ಯಕ್ಷ ಶಿವನಗೌಡ ಪಾಟೀಲ್ ಅವರು, "ನಮ್ಮ ನಿಮ್ಮೆಲ್ಲರ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರು ದೀಪ ಪ್ರಜ್ವಲನ ಕರೆಗೆ ಪರೋಕ್ಷವಾಗಿ ಓಗೊಟ್ಟಿರುವ ಎಚ್.ಡಿ ರೇವಣ್ಣ ಅವರಿಗೆ ನಮ್ಮ ಅನಂತಾನಂತ ಧನ್ಯವಾದಗಳು. ದೇಶ ವ್ಯಾಪಿ ಲಾಕ್ ಡೌನ್ ಇರುವುದರಿಂದ ಮೇಣದ ಬತ್ತಿಯನ್ನು ತರಲು ಹೊರಗೆ ಹೋದರೆ ಲಾಟಿಚಾರ್ಜ್ ಮಾಡುತ್ತಾರೆ ಎಂದು ಅಸಹಾಯಕತೆ ತೋರಿರುವುದು ನಮಗೆ ಗೊತ್ತಾಯಿತು. ಈ ಐತಿಹಾಸಿಕ ಕಾರ್ಯಕ್ರಮವು ಯಶಸ್ವಿಯಾಗಲು ರೇವಣ್ಣನಂಥವರ ದೈವ ಭಕ್ತರ ಸಹಕಾರವೂ ಅತ್ಯವಶ್ಯಕವಾಗಿದೆ. ಅವರ ಅಸಹಾಯಕತೆ ಮನಗಂಡು ಹೊಳೆನರಸೀಪುರ ಮನೆಯ ವಿಳಾಸಕ್ಕೆ ಮೇಣದ ಬತ್ತಿ ತುಂಬಿರುವ ಪ್ಯಾಕೆಟ್ ಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿಕೊಡುತ್ತಿದ್ದೇವೆ" ಎಂದು ವ್ಯಂಗ್ಯವಾಡಿದ್ದಾರೆ.
"ತಾವು ತಮ್ಮ ಕುಟುಂಬದ ಪರಿವಾರ ಸಮೇತರಾಗಿ ನಿರ್ಮಲ ಮತ್ತು ನಿಶ್ಚಲ ಮನಸ್ಸಿನಿಂದ ದೇಶಕ್ಕೆ ಬಂದ ಕೊರೊನಾ ವೈರಸ್ ಸಂಕಟವನ್ನು ಹೊಡೆದೋಡಿಸಲು ನಮ್ಮ ಪ್ರಧಾನಮಂತ್ರಿಯವರು ಕರೆ ನೀಡಿದ ಈ ದೀಪ ಪ್ರಜ್ವಲನ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ತಮ್ಮ ಪಕ್ಷದ ಯಾವುದಾದರೂ ಶಾಸಕರು ಈ ಅಸಹಾಯಕತೆಯ ಅಳಲು ತೋಡಿಕೊಂಡಿದ್ದರೆ ನಮಗೆ ತಿಳಿಸಿ. ನಾವು ಅವರಿಗೂ ಕಳುಹಿಸಿ ಕೊಡಲು ಸಿದ್ಧರಿದ್ದೇವೆ" ಎಂದಿದ್ದಾರೆ. ಇದೇ ವೇಳೆಯಲ್ಲಿ ಆನಂದ್ ರಾವ್ ಶಿಂಧೆ ಶ್ರೀಕಾಂತ್ ನೀಲಗುಂದ ಟಿಂಕರ್ ಮಂಜಣ್ಣ ಅಭಿಷೇಕ್ ಮತ್ತಿತರರು ಉಪಸ್ಥಿತರಿದ್ದರು.
Tags:
ರಾಜಕೀಯ ಸುದ್ದಿಗಳು