ಕುಮಟಾ: ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಕಾಲ ಕರೆ ನೀಡಿರುವ ಭಾರತ ಲಾಕ್ಡೌನ್ ಆದೇಶದಿಂದ ಜನಸಾಮಾನ್ಯರಿಗೆ ಅಗತ್ಯ ವಸ್ತುಗಳು ಸಕಾಲಕ್ಕೆ ದೊರೆಯದ ಕಾರಣ ಕ್ಷೇತ್ರದ ಜನರಿಗೆ ತಮ್ಮ ಸ್ವಂತ ಹಣದಿಂದ ಅಗತ್ಯ ವಸ್ತುಗಳು ಹಾಗೂ ತರಕಾರಿಗಳನ್ನು ಪೂರೈಸುತ್ತಿರುವ ಶಾಸಕ ದಿನಕರ ಶೆಟ್ಟಿಯವರ ಕಾರ್ಯವೈಖರಿ ಕ್ಷೇತ್ರದ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ.
ಭಾರತ ಲಾಕ್ಡೌನ್ ಆದೇಶದಿಂದ ಜನರಿಗೆ ತೊಂದರೆಯಾಗದಂತೆ ಒಂದಿಲ್ಲೊಂದು ನೂತನ ಜನಪರ ಕಾರ್ಯಕ್ರಮಗಳನ್ನು ತಮ್ಮ ಸ್ವಂತ ಹಣದಿಂದ ಕೈಗೊಳ್ಳುತ್ತಿರುವ ಶಾಸಕ ದಿನಕರ ಶೆಟ್ಟಿ, ಆಟೋ-ಚಾಲಕರಿಗೆ ಬಾಡಿಗೆ ದೊರೆಯದ ಕಾರಣ ಅವರ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸಿ, ಕಳೆದ 3 ದಿನಗಳ ಹಿಂದೆ ಪ್ರತಿಯೊಬ್ಬರಿಗೂ ತಲಾ 1 ಸಾವಿರ ರೂ. ನೀಡಿ, ಅವರ ಕಷ್ಟಕ್ಕೆ ಸಹಾಯರಾಗಿದ್ದರು.
ಗೋಕರ್ಣದ ರೈತರು ಬೆಳೆದ ತರಕಾರಿಗಳು ಹಾಳಾಗಬಾರದು ಹಾಗೂ ಕ್ಷೇತ್ರದ ಜನತೆಗೆ ಸಕಾಲಕ್ಕೆ ಅಗತ್ಯ ತರಕಾರಿ ಹಾಗೂ ದಿನಸಿ ವಸ್ತುಗಳು ದೊರೆಯಬೇಕು ಎಂಬ ಉದ್ದೇಶದಿಂದ ಗೋಕರ್ಣದಿಂದ ಒಂದು ಲೋಡ್ ತರಕಾರಿಗಳನ್ನು ಖರೀದಿಸಿ ಸೋಮವಾರ ತಮ್ಮ ನಿವಾಸಕ್ಕೆ ತರಿಸಿಕೊಂಡು, ಕ್ಷೇತ್ರದ ಬಡ ಜನತೆಗೆ ವಿತರಿಸುತ್ತಿದ್ದಾರೆ. ಅಲ್ಲದೇ, ದೂರವಾಣಿ ಮೂಲಕ ತಾವೇ ಸ್ವತಃ ಪಟ್ಟಣದ ಪ್ರಮುಖರನ್ನು ಸಂಪರ್ಕಿಸಿ, ಮಾಹಿತಿ ತಿಳಿಸಿ, ಆಯಾ ಭಾಗದ ಜನತೆಯನ್ನು ತಮ್ಮ ನಿವಾಸಕ್ಕೆ ಕಳಿಸುವಂತೆ ತಿಳಿಸಿದ್ದಾರೆ. ಅವರ ನಿವಾಸಕ್ಕೆ ಆಗಮಿಸಿದ ಜನಸಾಮಾನ್ಯರು ತರಕಾರಿ ಪಡೆದು ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ದೃಶ್ಯ ಕಂಡುಬಂತು. ಅಲ್ಲದೇ, ತರಕಾರಿ ಖರೀದಿಸಲು ಆಗಮಿಸಿದವರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿ, ತರಕಾರಿಗಳನ್ನು ವಿತರಿಸಲಾಯಿತು.
ನಂತರ ಮಾತನಾಡಿದ ಅವರು, ಲಾಕ್ಡೌನ್ ಆದೇಶಕ್ಕೆ ಕ್ಷೇತ್ರದ ಜನತೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅಲ್ಲದೇ, ವೈದ್ಯರು, ಪೊಲೀಸರು ಹಾಗೂ ಇತರ ಅಧಿಕಾರಿ ವರ್ಗದವರು ಜನರ ಸಮಸ್ಯೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ನೊಡಲ್ ಅಧಿಕಾರಿಗಳೂ ಸಹ ಗ್ರಾಮ ಪಂಚಾಯತ ಮಟ್ಟದಲ್ಲಿ ಪ್ರತಿ ಮನೆಗೆ ದಿನಸಿ ಹಾಗೂ ತರಕಾರಿಗಳನ್ನು ಪೂರೈಸುತ್ತಿದ್ದಾರೆ. ಅದರಂತೆ ಕ್ಷೇತ್ರದ ಜನತೆಗೆ ತರಕಾರಿಗಳು ಸಕಾಲಕ್ಕೆ ದೊರೆಯಲಿ ಎಂಬ ಉದ್ದೇಶದಿಂದ ಸ್ವಂತ ಹಣದಿಂದ ಒಂದು ಲೋಡ್ ತರಕಾರಿಯನ್ನು ತಂದು, ಜನತೆಗೆ ವಿತರಿಸಲಾಗುತ್ತಿದೆ. ಈ ತರಕಾರಿ ಖಾಲಿಯಾದ ನಂತರ ಇನ್ನೂ ಹೆಚ್ಚಿನ ತರಕಾರಿಗಳನ್ನು ಖರೀದಿಸಿ, ಕ್ಷೇತ್ರದ ಜನತೆಗೆ ನೀಡಲಾಗುತ್ತದೆ ಎಂದರು.