ಹೊನ್ನಾವರ: ಕೊರೊನಾ ಭಯದಲ್ಲಿ ಎಲ್ಲರೂ ಮನೆಯೊಳಗೆ ತಣ್ಣನೆ ಕುಳಿತಿರುವ ಹೊತ್ತಲ್ಲಿ ತಾಲೂಕಿನ ಹಳದಿಪುರದಲ್ಲಿ ಪಾಪಿ ತಾಯಿಯೊಬ್ಬಳು ಹೆತ್ತ ಹಸುಗೂಸನ್ನು ಸ್ಮಶಾನದಂಚಿನ ಪೊದೆಗೆ ಎಸೆದ ಹೃದಯವಿದ್ರಾವಕ ಘಟನೆ ವರದಿಯಾಗಿದೆ.
ಹೊನ್ನಾವರ ತಾಲೂಕಿನ ಹಳದಿಪುರ ಸಾಲಿಕೇರಿ ಸ್ಮಶಾನದ ಪಕ್ಕದ ಗುಡ್ಡದ ನಿರ್ಜನ ಪ್ರದೇಶದಲ್ಲಿ ನವಜಾತ ಶಿಶುವನ್ನು ಎಸೆದು ಸಾಯಿಸಿದ್ದಲ್ಲದೆ ಮಗುವಿನ ಜನನವನ್ನು ಮುಚ್ಚಿಡುವ ದುರುದ್ದೇಶದಿಂದ ಈ ಕೃತ್ಯ ಎಸಗಿರುವ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಡ್ಡದಲ್ಲಿ ನವಜಾತ ಶಿಶು ಅನಾಥವಾಗಿ ಬಿದ್ದಿರುವುದನ್ನು ಕಂಡ ಸ್ಥಳೀಯರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯವರು ಪೊಲೀಸ್ ಠಾಣೆಗೆ ವಿಷಯ ತಿಳಿಸಿದ ನಂತರ ಶಿಶು ಅಭಿವೃದ್ಧಿ ಯೋಜನೆಯ ಅಂಗನವಾಡಿ ಮೇಲ್ವಿಚಾರಕಿ ಜ್ಯೋತಿ ಪಟಗಾರ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಜಗತ್ತಿನಲ್ಲಿ ಕೆಟ್ಟ ಮಕ್ಕಳು ಹುಟ್ಟಬಹುದು ಆದರೆ ಕೆಟ್ಟ ತಾಯಿ ಇರಲಿಕ್ಕೆ ಸಾಧ್ಯವಿಲ್ಲ ಎನ್ನುವ ಗೌರವವನ್ನು ಹೆತ್ತವಳಿಗೆ ನೀಡುವ ಸಮಾಜದಲ್ಲಿ ಹೆಣ್ಣಿನ ಕುಲಕ್ಕೇ ಕಳಂಕ ತರುವ ಕೆಲಸ ಮಾಡಿದ ಪಾಪಿ ತಾಯಿಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಒಂದೇ ಒಂದು ಕರುಳ ಕುಡಿಗಾಗಿ ಜೀವನವೆಲ್ಲಾ ಪರಿತಪಿಸುತ್ತಿರುವ ಅದೆಷ್ಟೋ ಮಹಿಳೆಯರಿರುವಾಗ ಅದಾಗ ತಾನೇ ಜನಿಸಿದ ಮಗುವನ್ನು ಕೊಲ್ಲುವ ಆ ಹೆಣ್ಣಿನ ಹೃದಯ ಅದೆಷ್ಟು ಕಠೋರವಾಗಿರಬಹುದೆನ್ನುವ ಬಗ್ಗೆ ಜನರು ಆಡಿಕೊಳ್ಳುತ್ತಿದ್ದಾರೆ.
ತಾಲೂಕನ್ನೇ ತಲ್ಲಣಗೊಳಿಸಿದ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಪ್ರಕರಣ ದಾಖಲಾದ ೨೪ ಗಂಟೆಯೊಳಗೆ ನವಜಾತ ಶಿಶುವಿನ ಸಾವಿಗೆ ಕಾರಣರಾದವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಮುಖ ಆರೋಪಿಗಳಾದ ಮಗುವಿನ ತಾಯಿ ನೇತ್ರಾವತಿ ತಿಮ್ಮಪ್ಪ ಮುಕ್ರಿ, ನೇತ್ರಾವತಿಯ ಪ್ರಿಯಕರ ಕರ್ಕಿಯ ವಿಶ್ವನಾಥ ದೇವು ಮುಕ್ರಿ ಹಾಗೂ ಅಪರಾಧಕ್ಕೆ ನೆರವಾದ ಹುಡುಗಿಯ ತಂದೆ ತಾಯಿಯಾದ ತಿಮ್ಮಪ್ಪ ರಾಮ ಮುಕ್ರಿ ಹಾಗೂ ಪರಮೇಶ್ವರಿ ತಿಮ್ಮಪ್ಪ ಮುಕ್ರಿ ಬಂಧಿತ ಆರೋಪಿಗಳಾಗಿದ್ದಾರೆ.
ಕರ್ಕಿಯವನಾದ ವಿಶ್ವನಾಥ ಮುಕ್ರಿ ಬಡಗಣಿಯ ನೇತ್ರಾವತಿ ಮುಕ್ರಿ ಎಂಬವಳನ್ನು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇಬ್ಬರ ನಡುವಿನ ಪ್ರೀತಿ ಪ್ರೇಮ ಕಾಮಕ್ಕೆ ತಿರುಗಿ ಲೈಂಗಿಕ ಸಂಪರ್ಕದವರೆಗೂ ಮುಂದುವರಿದಿದೆ. ಇದರ ಪರಿಣಾಮ ನೇತ್ರಾವತಿ ಗರ್ಭದರಿಸಿದ್ದರೂ ಹುಡುಗಿಯ ಮನೆಯವರ ಪ್ರತಿರೋಧವಿಲ್ಲದ ಕಾರಣ ಇಬ್ಬರ ನಡುವಿನ ಸಂಬAಧ ನಿರಾತಂಕವಾಗಿ ಮುಂದುವರಿದಿದೆ. ಮದುವೆಯಾಗುತ್ತೇನೆ ಎಂದು ಪುಸಲಾಯಿಸುತ್ತಲೇ ಕಾಲ ಕಳೆದ ವಿಶ್ವನಾಥನಿಗೆ ಹಾಗೂ ಆತನ ಪ್ರೇಯಸಿ ನೇತ್ರಾವತಿ ಇಬ್ಬರಿಗೂ ಕಾಮ ಬೇಕಿತ್ತೇ ಹೊರತು ಕಾಮದ ಪ್ರತಿಫಲವಾಗಿ ಬೆಳೆಯುತ್ತಿದ್ದ ಮಗು ಬೇಕಾಗಿರಲಿಲ್ಲ. ಇಬ್ಬರೂ ಸೇರುವಾಗ ಇಲ್ಲದ ಸಮಾಜದ ಅಂಜಿಕೆ ಮದುವೆಗೂ ಮೊದಲೇ ಮಗುವಾದರೆ ಸಮಾಜದ ದೃಷ್ಟಿಯಲ್ಲಿ ಮರ್ಯಾದೆ ಇರುವುದಿಲ್ಲ ಎಂದುಕೊAಡ ಇಬ್ಬರೂ ಸೇರಿ ತೆಗೆದುಕೊಂಡ ನಿರ್ಧಾರ ಮಾತ್ರ ಯಾವುದನ್ನೂ ಅರಿಯದೇ ಪ್ರಪಂಚಕ್ಕೆ ಬಂದ ಹಸುಗೂಸನ್ನು ಬಲಿತೆಗೆದುಕೊಂಡುಬಿಟ್ಟಿದೆ.
ಹೆತ್ತ ಮಗುವನ್ನು ಗುಡ್ಡದಲ್ಲಿ ಬೀಸಾಕಿ ಬಂದ ಮಗಳನ್ನು ಮನೆಯಲ್ಲಿರಿಸಿಕೊಂಡ ತಂದೆ ತಾಯಿ ಎನಿಸಿಕೊಂಡವರು ರಕ್ತಸಿಕ್ತವಾಗಿದ್ದ ಮಗಳಿಗೆ ಸ್ನಾನ ಮಾಡಿಸುವಷ್ಟೂ ಜವಾಬ್ಧಾರಿಯನ್ನು ಹೊಂದಿಲ್ಲ ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹಸುಗೂಸಿನ ಕೊಲೆ ಪ್ರಕರಣದಲ್ಲಿ ದಸ್ತಗಿರಿಯಾಗಿರುವ ಯುವಕ ಇದೀಗ ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಮದುವೆಯಾಗುವುದಾಗಿ ಹೇಳುತ್ತಿದ್ದಾನೆನ್ನಲಾಗಿದೆ. ಇದೇ ಕೆಲಸವನ್ನು ಕೆಲ ದಿನಗಳ ಹಿಂದೆ ಮಾಡಿದ್ದರೆ ಹಸುಗೂಸು ಉಳಿಯುತ್ತಿತ್ತಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ. ಪಾಪಿ ಪ್ರೇಮಿಗಳಿಬ್ಬರ ಜೊತೆ ಹುಡುಗಿಯ ತಂದೆ ತಾಯಿಯನ್ನೂ ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕಳೆದ ಹದಿನೈದು ದಿನದಲ್ಲಿ ತಾಲೂಕಿನಲ್ಲಿ ಎರಡನೇ ವಿವಾಹಪೂರ್ವ ಸಂಬAಧದ ಪ್ರಕರಣ
ಎಪ್ರಿಲ್ ೦೧ ನೇ ತಾರೀಕು ತಾಲೂಕಿನ ಸರಳಗಿಯಲ್ಲಿ ಪ್ರಿಯಕರನೊಬ್ಬ ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಯುವತಿಯನ್ನು ಗರ್ಭವತಿಯಾಗಿಸಿದ ಬಗ್ಗೆ ಪೊಕ್ಸೋ ಕೇಸು ದಾಖಲಾಗಿತ್ತು. ಇದೀಗ ಹಳದಿಪುರದಲ್ಲಿ ಇದೇ ತೆರನಾದ ಇದಕ್ಕಿಂತ ಘೋರವಾದ ಅಪರಾಧ ಪ್ರಕರಣ ವರದಿಯಾಗುವ ಮೂಲಕ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಸಮಾಜಗಳಲ್ಲಿ ಲೈಂಗಿಕ ಶೋಷಣೆಯ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.