ಸೋಶಿಯಲ್ ಮೀಡಿಯಾ ಗಳ ಬಳಕೆಯಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ದುರುಪಯೋಗವು ಕೂಡ ಇದ್ದೇ ಇದೆ. ಇದಕ್ಕೆ ಸಾಕ್ಷಿಯೆಂಬಂತೆ ಹೊನ್ನಾವರದ ವ್ಯಕ್ತಿಯೊಬ್ಬ ಸೋಶಿಯಲ್ ಮೀಡಿಯಾದ ಮೋಸದ ಜಾಲಕ್ಕೆ ಸಿಲುಕಿ ಸುಮಾರು 4 ಲಕ್ಷ ರೂಪಾಯಿಗೂ ಹೆಚ್ಚಿನ ಹಣವನ್ನು ಕಳೆದುಕೊಂಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಪೋರ್ಚುಗಲ್ ಯುವತಿ, ತಾನು ಅತಿ ಶ್ರೀಮಂತ ಳಾಗಿದ್ದು ಭಾರತದಲ್ಲಿ ತಾನು ಹೂಡಿಕೆ ಮಾಡಬೇಕು ಹಾಗೂ ಅದಕ್ಕಾಗಿ ನಾನು ಒಬ್ಬ ನಂಬಿಗಸ್ತ ವ್ಯಕ್ತಿಯನ್ನು ಹುಡುಕುತ್ತಿದ್ದೇನೆ ಎಂದು ಹೇಳಿ ಪರಿಚಯ ಮಾಡಿಕೊಂಡು ಹೊನ್ನಾವರದ ಗುಣವಂತೆಯ ಶ್ರೀಪಾದ ಹೆಗಡೆ ಎಂಬುವವರಿಗೆ ಮೋಸದ ಜಾಲವನ್ನು ಬೀಸಿದ್ದಾರೆ.
ನಾನು ಭಾರತಕ್ಕೆ ಬರುವುದು ತಡ ಆಗಬಹುದು. ಆದರೆ ಇದೀಗ ತಾನು ತನ್ನ ಪ್ರತಿನಿಧಿಯನ್ನು ಭಾರತಕ್ಕೆ ಕಳುಹಿಸಿ ಕೊಡುತ್ತಿದ್ದೇನೆ ಹಾಗೂ ಉಡುಗೊರೆಯಾಗಿ ಬಟ್ಟೆ ಶೂ ವಾಚ್ ಹಾಗೂ ಎರಡು ಲಕ್ಷ ಡಾಲರ್ ಮೌಲ್ಯವನ್ನು ಕಳುಹಿಸಿ ಕೊಡುತ್ತಿದ್ದೇನೆ ಎಂದು ಹೇಳಿದ್ದಾಳೆ.
ಇದರಂತೆಯೇ ಆಕೆಯ ಮಧ್ಯವರ್ತಿ ಶ್ರೀಪಾದ ಹೆಗಡೆ ಅವರನ್ನು ಸಂಪರ್ಕಿಸಿ ತಾನು ಭಾರತಕ್ಕೆ ಬಂದಿದ್ದೇನೆ. ಇಲ್ಲಿನ ವಿಮಾನ ವೆಚ್ಚ ಕೋವಿಡ್ ಸರ್ಟಿಫಿಕೇಟ್ ವೆಚ್ಚ ಪೋಲಿಸ್ ವೆರಿಫಿಕೇಶನ್ ವೆಚ್ಚ ಹಾಗೂ ಇನ್ನಿತರ ವೆಚ್ಚಗಳನ್ನು ಬರಿಸುವಂತೆ ಹೇಳಿದ್ದಾನೆ. ಇದನ್ನು ನಂಬಿದ ಶ್ರೀಪಾದ್ ಹೆಗಡೆಯವರು ಜೂನ್ 10 ರಿಂದ 26 ನೇ ತಾರೀಖಿನವರೆಗೆ ಸುಮಾರು 4.96 ಲಕ್ಷಗಳನ್ನು ಅವರು ಹೇಳಿದ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ತದನಂತರ ಎಷ್ಟೇ ದಿನಗಳು ಕಳೆದರೂ ಪಾರ್ಸೆಲ್ ಬರದೇ ಇರುವುದನ್ನು ಗಮನಿಸಿದ ಅವರು ತಾನು ಮೋಸ ಹೋಗಿದ್ದೇನೆ ಎಂದು ಖಚಿತಪಡಿಸಿಕೊಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಮೋಸ ಮಾಡುವ ಪ್ರಕರಣ ಹೆಚ್ಚಾಗುತ್ತಿದ್ದು ಇದರ ಬಗ್ಗೆ ಎಚ್ಚರಿಕೆಯನ್ನು ವಹಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.