ಚಲಿಸುತ್ತಿದ್ದ ಬೈಕೊಂದು ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಹಾಗೂ ಬೈಕ್ ಹಿಂಬದಿಯ ಸವಾರ ತೀವ್ರವಾಗಿ ಗಾಯಗೊಂಡ ಘಟನೆ ಕಾರವಾರ ತಾಲೂಕಿನ ಕೂರ್ನಿಪೇಟದಲ್ಲಿ ನಡೆದಿದೆ.
ಮೃತಪಟ್ಟವರನ್ನು ಕಾರವಾರದ ಕೋಡಿ ಭಾಗ ನಿವಾಸಿ ಶಶಿಕಾಂತ್ ಚಂದ್ರಕಾಂತ್ ಎನ್ನಲಾಗಿದೆ. ಹಿಂಬದಿಯ ಸವಾರ ಮಲ್ಲಾಪುರದ ದೇವೇಂದ್ರ ರಾಜಕುಮಾರ್ ( 21 ವರ್ಷ) ಗಾಯಗೊಂಡಿದ್ದಾರೆ.
ಘಟನೆಯ ವಿವರ:
ಶಶಿಕಾಂತ್ ಈತ ತನ್ನ ಬಜಾಜ್ ಪಲ್ಸರ್ ಬೈಕಿನಲ್ಲಿ ರವಿವಾರ ಸಂಜೆಯ ವೇಳೆಗೆ ದೇವೇಂದ್ರ ಎಂಬಾತನನ್ನು ಹಿಂಬದಿಗೆ ಕುಳ್ಳಿರಿಸಿಕೊಂಡು ಕೈಗ ಟೌನ್ಶಿಪ್ ಕಡೆಯಿಂದ ಕೂರ್ನಿಪೇಟಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಅತಿವೇಗ ಮತ್ತು ನಿರ್ಲಕ್ಷದ ಚಾಲನೆಯಿಂದ ರಸ್ತೆಯಲ್ಲಿರುವ ಮರವೊಂದಕ್ಕೆ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಶಶಿಕಾಂತ್ ಎಂಬಾತನ ತಲೆ ಮತ್ತು ಮುಖಕ್ಕೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸಂಬಂಧ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.