ಗೋಕರ್ಣ: ವಿಶ್ವದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ವೈರಸ್ ತಡೆಗೆ ಗೋಕರ್ಣದಲ್ಲಿ ಗುರುವಾರ ಯಜ್ಞ ಹಮ್ಮಿಕೊಳ್ಳಲಾಯಿತು. ದೇಶೀಯ ಗೋವಿನ ತುಪ್ಪ ಮತ್ತು ಹಾಲಿನಿಂದ ಆಹುತಿ ನೀಡಿ ಶೀಘ್ರವೇ ಸೋಂಕು ಸಂಪೂರ್ಣ ನಿರ್ಮೂಲನೆಯಾಗುವಂತೆ ದೇವರನ್ನು ಪ್ರಾರ್ಥಿಸಲಾಯಿತು.
ಗಾಯತ್ರಿ ತೀರ್ಥದ ತಟದಲ್ಲಿ ನಡೆದ ಈ ಯಜ್ಞವು, ಅಶ್ವಿನಿಕುಮಾರ ದೇವತೆಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಕೊರೊನಾ ಎಂಬ ರಾಕ್ಷಸನನ್ನು ಸಂಹಾರ ಮಾಡುವಂತೆ ಕ್ಷೇತ್ರನಾಥ ವೀರಭದ್ರನಲ್ಲಿ ಪ್ರಾರ್ಥಿಸಲಾಯಿತು. 15ಕ್ಕೂ ಹೆಚ್ಚು ವೈದಿಕರು ಋಗ್ವೇದದಲ್ಲಿನ ಅಂಗಿರಸ ಕುತ್ಸ ಋಷಿಯ ಸೂಕ್ತ ಪಠಣ ಮಾಡಿದರು.
ಯಾಗದ ನೇತೃತ್ವ ವಹಿಸಿದ್ದ ಅಥರ್ವ ವೇದಿ ಶ್ರೀಧರ ಅಡಿ, ಸ್ಥಳದಲ್ಲಿಯೇ ಶ್ಲೋಕ ರಚಿಸಿ ಪ್ರಾರ್ಥಿಸಿದರು.
ಸಚಿವ ಈಶ್ವರಪ್ಪ ಅವರ ಆಪ್ತ ಸಹಾಯಕ ಎನ್.ಎಸ್.ವಿನಯ್, ಬೆಂಗಳೂರಿನ ಉದ್ಯಮಿ ಸೋಮಶೇಖರ ಎಸ್.ಟಿ., ಭರತಕುಮಾರ್, ನಾಗರಾಜ ಜೋಗಭಟ್, ಹರೀಶ ಭಟ್ಟಯ್ಯ, ಗಣೇಶ ಜೋಶಿ, ಹರಿಹರೇಶ್ವರ ವೇದ ಪಾಠಶಾಲಾ ವಿದ್ಯಾರ್ಥಿಗಳು ಹಾಗೂ ಯಂಗ್ ಸ್ಟಾರ್ ಗ್ರೂಪ್ ಸದಸ್ಯರು ಇದ್ದರು.