ಕುಮಟಾ: ಪಟ್ಟಣದ ಬಸ್ತಿಪೇಟೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕಾಗಿ ಅಕ್ಕಪಕ್ಕದ ಅನಧಿಕೃತ ಕಾಂಪೌಂಡ್ ಹಾಗೂ ಗಟಾರವನ್ನು ಗುರುವಾರ ತೆರವು ಮಾಡಲಾಯಿತು.
ಈ ರಸ್ತೆಯನ್ನು ಸಂಪರ್ಕಿಸುವ ಜೈವಂತ ಸ್ಟುಡಿಯೋ ರಸ್ತೆಯನ್ನು ಪುರಸಭೆ ಅಧಿಕಾರಿಗಳು ಆರು ತಿಂಗಳ ಹಿಂದೆ ತೆರವುಗೊಳಿಸಿದ್ದರು. 12 ಮೀಟರ್ ವಿಸ್ತಾರದ ರಸ್ತೆ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
‘ಬಸ್ತಿಪೇಟೆ ರಸ್ತೆ ಸ್ಥಳೀಯ ಪುರಸಭೆಗೆ ಸೇರಿದೆ. ಜೈವಂತ ಸ್ಟುಡಿಯೋ ಕ್ರಾಸ್ನಿಂದ ನೆಲ್ಲಿಕೇರಿ ಮಾಸ್ತಿಕಟ್ಟೆ ವೃತ್ತದವರೆಗೆ ಲೋಕೋಪಯೋಗಿ ಇಲಾಖೆ ಸುಮಾರು ₹ 2.5 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ನಿರ್ಮಿಸುತ್ತಿದೆ. ಆದರೆ, ಕೆಲವೆಡೆ ರಸ್ತೆಯನ್ನು ಅತಿಕ್ರಮಿಸಲಾಗಿದೆ. ಅವುಗಳನ್ನು ಉಪವಿಭಾಗಾಧಿಕಾರಿ ಅವರ ಆದೇಶದನ್ವಯ ತೆರವು ಮಾಡಲಾಗುತ್ತಿದೆ. ಈ ಕಾರ್ಯಾಚರಣೆಯು ಕೆಲವು ದಿನಗಳವರೆಗೆ ನಡೆಯಲಿದೆ’ ಎಂದು ಅಧಿಕಾರಿಗಳು ತಿಳಿಸಿದರು.
‘ಕಾರ್ಯಾಚರಣೆ ಆರಂಭದಲ್ಲಿ ಸ್ಥಳೀಯ ಶಂಕರನಾರಾಯಣ ದೇವಾಲಯದ ಪಾಂಡುರಂಗ ಭಟ್ಟ, ವ್ಯಾಪಾರಿಗಳಾದ ರಮೇಶ ಬಾಳಗಿ, ನಾಗೇಶ ಶಾನಭಾಗ, ಶ್ರೀಧರ ಬಾಳಗಿ ಅವರೊಂದಿಗೆ ರಸ್ತೆ ವಿಸ್ತರಣೆಯ ಮಾತುಕತೆ ನಡೆಸಲಾಗಿದೆ. ಅವರೆಲ್ಲ ಕಾರ್ಯಾಚರಣೆಗೆ ಸಹಕರಿಸಿರುವುದು ವಿಶೇಷವಾಗಿದೆ. 12 ಮೀಟರ್ ಅಗಲದ ಸಿಮೆಂಟ್ ರಸ್ತೆ ನಿರ್ಮಾಣವಾದರೆ ಸಂಚಾರಕ್ಕೆ ಅನುಕೂಲವಾಗಲಿದೆ’ ಎಂದರು.